ಧರ್ಮಸ್ಥಳ ಪ್ರಯಾಣ ಸರಾಗ, ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆರಿಸಲು ಅನುಮೋದನೆಗೆ ಸಿದ್ಧತೆ: ಉಜಿರೆ- ಧರ್ಮಸ್ಥಳ ಚತುಷ್ಪಥ ರಸ್ತೆ, ಧರ್ಮಸ್ಥಳ- ಪೆರಿಯಶಾಂತಿ ದ್ವಿಪಥ ಕಾಂಕ್ರೀಟ್ ರಸ್ತೆಗೆ ಪ್ರಸ್ತಾವನೆ ಸಲ್ಲಿಕೆ: ಧರ್ಮಸ್ಥಳ ಮೂಲಕ ಎರಡು ರಾಷ್ಟ್ರೀಯ ಹೆದ್ದಾರಿಗಳ ಜೋಡೀಕರಣ, ಮೊದಲ ಹಂತದ ಸರ್ವೇ ಕಾರ್ಯ ಪೂರ್ಣ

 

 

 

 

ಬೆಳ್ತಂಗಡಿ:  ದ.ಕ ಜಿಲ್ಲೆಯ ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳ ನಡುವೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಉಜಿರೆಯಿಂದ ಪೆರಿಯಶಾಂತಿಯ ವರೆಗಿನ 30 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಿ ಪ್ರಸ್ತಾವನೆ ಸಲ್ಲಿಕೆಯಾಗಿದೆ.
ಉಜಿರೆಯಿಂದ ಪೆರಿಯಶಾಂತಿಯ ವರೆಗೆ ರಾಜ್ಯ ಹೆದ್ದಾರಿ ಅಗಲ ಕಿರಿದಾದ ರಸ್ತೆಯಾಗಿದ್ದು ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುವ ಅತ್ಯಂತ ಪ್ರಮುಖ ರಸ್ತೆಯಾಗಿದೆ.
ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಗೂ ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಯಾತ್ರಿಕರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬರಲು ಇದೇ ಹೆದ್ದಾರಿಯನ್ನು ಅವಲಂಬಿಸಬೇಕಾಗಿದೆ. ಇದರಿಂದಾಗಿಯೇ ಈ ರಸ್ತೆಯಲ್ಲಿ ಸದಾ ವಾಹನಗಳ ದಟ್ಟಣೆ ಅತ್ಯಂತ ಹೆಚ್ಚಾಗಿರುತ್ತದೆ.
ಉಜಿರೆಯಿಂದ ಧರ್ಮಸ್ಥಳ ಕಲ್ಲೇರಿಯ ವರೆಗೆ 9 ಕಿ.ಮೀ ಚತುಷ್ಪದ ರಸ್ತೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಈಗಾಗಲೆ ಉಜಿರೆ ಪೇಟೆಯಲ್ಲಿ ಚತುಷ್ಪಥ ರಸ್ತೆ ನಿರ್ಮಾಣಗೊಂಡಿದ್ದು ಇದು ಧರ್ಮಸ್ಥಳವರೆಗೂ ಮುಂದುವರಿಯಲಿದೆ. ಧರ್ಮಸ್ಥಳದಿಂದ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಲಿಸುವ ಪೆರಿಯಶಾಂತಿವರೆಗೆ 21 ಕಿ. ಮೀ. ಉದ್ದದ ರಸ್ತೆ ದ್ವಿಪಥ ರಸ್ತೆಯಾಗಿ ನಿರ್ಮಾಣವಾಗಲಿದೆ.
ಈಗಾಗಲೆ ರಸ್ತೆಗೆ ಮೊದಲ ಹಂತದ ಸರ್ವೇ ಕಾರ್ಯ ಮಾಡಲಾಗಿದ್ದು ಸದ್ಯದಲ್ಲಿಯೇ ಅನುಮೋದನೆ ಸಿಗುವ ನಿರೀಕ್ಷೆಯಿದೆ.

error: Content is protected !!