ಅರಣ್ಯಾಧಿಕಾರಿ‌ ಸಂಧ್ಯಾ ಕಿರುಕುಳ ತಾಳಲಾರದೆ ವ್ಯಕ್ತಿ ಸಾವು ಆರೋಪ: ನ್ಯಾಯಕ್ಕೆ ಆಗ್ರಹಿಸಿ ಬೆಳ್ತಂಗಡಿ ಠಾಣೆ ಮುಂಭಾಗ ಮೃತದೇಹ ಇಟ್ಟು ಪ್ರತಿಭಟನೆ: ಜಾತಿನಿಂದನೆ, ಜೀವ ಬೆದರಿಕೆಯೊಡ್ಡಿದ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳುವಂತೆ ಮೃತರ ಪುತ್ರಿಯಿಂದ ದೂರು

 

 

ಬೆಳ್ತಂಗಡಿ: ಅರಣ್ಯಾಧಿಕಾರಿ‌ ಸಂಧ್ಯಾ ಅವರು ಸುಳ್ಳು ಆರೋಪಗಳನ್ನು ಹೊರಿಸಿ, ಸುಮಾರು 10 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟು ಹಾಗೂ ಖಾಲಿ ಪತ್ರಕ್ಕೆ ಸಹಿ ಹಾಕಿಸಿಕೊಳ್ಳುವ ಮೂಲಕ ಕುವೆಟ್ಟು ಗ್ರಾಮದ ಬದ್ಯಾರು ನಿವಾಸಿ ರಾಮನಾಯ್ಕ ಅವರಿಗೆ ಕಿರುಕುಳ ನೀಡಿದ್ದು, ಈ ಹಿನ್ನೆಲೆ‌ ಖಿನ್ನತೆಗೆ ಒಳಗಾಗಿದ್ದ ಅವರು ಬುಧವಾರ ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯ ಮುಂಭಾಗ ಮೃತದೇಹ ಇಟ್ಟು ಪ್ರತಿಭಟನೆ ನಡೆಸಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಪ್ರಕರಣ ಕುರಿತು ಮೃತರ ಪುತ್ರಿ ಅಕ್ಷತಾ ಲಿಖಿತ ದೂರು ನೀಡಿದ್ದು, ತನ್ನ ತಂದೆಯ ಸಾವಿಗೆ ಕಾರಣರಾದ ಸ್ಕ್ವಾಡ್ ಅಧಿಕಾರಿ ಸಂಧ್ಯಾ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

 

 

ದೂರಿನಲ್ಲಿ ಕುವೆಟ್ಟು ಗ್ರಾಮದಲ್ಲಿ ತಮ್ಮ ತಂದೆಗೆ ಸೇರಿದ 2 ಎಕ್ರೆ ಜಾಗವಿದ್ದು, ಸುಮಾರು 60 ವರ್ಷಗಳಿಂದ ಕೃಷಿ ಮಾಡುತ್ತಿದ್ದಾರೆ. ಸ್ಥಳದಲ್ಲಿ ಕೃಷಿಯ ಜೊತೆ ಇತರ ಕಾಡು ಜಾತಿ ಮರಗಳನ್ನು ನೆಟ್ಟು ಬೆಳೆಸಿದ್ದರು, 4-5 ವರ್ಷಗಳಿಂದ ಸ್ಥಳದಲ್ಲಿದ್ದ ಕಾಡು ಜಾತಿ ಮರಗಳನ್ನು ತೆರವುಗೊಳಿಸಿ, ಅಲ್ಲಿಯೇ ದಾಸ್ತಾನು ಮಾಡಿ ಇಡಲಾಗಿತ್ತು. ಬಳಿಕ ಅಲ್ಲಿ ಅಡಿಕೆ ಕೃಷಿ ಮಾಡಲಾಗುತ್ತಿತ್ತು. 2022ರ ಜನವರಿ 4ರಂದು ಮಂಗಳೂರಿನ ಸ್ಕ್ವಾಡ್ ಅಧಿಕಾರಿಗಳು ಎಂದು ಹೇಳಿಕೊಂಡು ಬಂದ ಸಂಧ್ಯಾ ಹಾಗೂ ಇತರ ನಾಲ್ಕು ಅಧಿಕಾರಿಗಳು ಮನೆಯಲ್ಲಿ ತಂದೆಯ ಬಳಿ ಬಂದು ಮಾತನಾಡಿದ್ದಾರೆ‌. ಈ ವೇಳೆ ದಾಸ್ತಾನು ಇಟ್ಟ ಮರಗಳನ್ನು ಮರಗಳ್ಳರ ಜೊತೆ ಸೇರಿಕೊಂಡು ಮರ ಮಾರಾಟ ಮಾಡುತ್ತಿರುವಂತೆ ಹೇಳಿಕೆ ನೀಡುವಂತೆ ಒತ್ತಾಯಿಸಿದ್ದರು, ಆದರೆ ಇದಕ್ಕೆ ತಂದೆ ಒಪ್ಪಿರಲಿಲ್ಲ. ತಾನು ಕೃಷಿ ಅಭಿವೃದ್ಧಿಗಾಗಿ ಮಾತ್ರ ತನ್ನ ಹಕ್ಕಿನ ಜಾಗದಿಂದ ಮರಗಳನ್ನು ತೆರವುಗೊಳಿಸಿದ್ದೇನೆ, ಯಾವುದೇ ಮರಗಳ್ಳರಿಗೆ ಮಾರಾಟ‌ಮಾಡುವ ಉದ್ದೇಶದಿಂದ ತೆರವು ಮಾಡುವುದಿಲ್ಲ ಎಂದು‌ ಹೇಳಿದ್ದರು. ಅದಕ್ಕೆ ಸ್ಟ್ಯಾಡ್‌ನ ಅಧಿಕಾರಿಗಳು ಕೀಳು ಜಾತಿಯವರಾದ ನಿಮ್ಮ ಕೆಲಸವೇ ಮರಗಳ್ಳರೊಂದಿಗೆ ಮರ ಮಾರಾಟ ಮಾಡುವುದು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆಯನ್ನೂ ಒಡ್ಡಿದ್ದು, ಖಾಲಿ ಹಾಳೆಗೆ ಸಹಿಯನ್ನೂ ಪಡೆದಿದ್ದಾರೆ. ನಿಮ್ಮ ಮೇಲೆ ಪ್ರಕರಣ ದಾಖಲಿಸುವುದಾಗಿಯೂ, ಪ್ರಕರಣವನ್ನು ಮುಗಿಸಲು ಸುಮಾರು 10 ಲಕ್ಷ ಹಣ ನೀಡಬೇಕೆಂದು ಬೆದರಿಸಿ ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ‌.

 

 

 

ಈ ಘಟನೆಯಿಂದ ಮನನೊಂದಿದ್ದ ತಮ್ಮ ತಂದೆ, ನನ್ನಲ್ಲಿ ಹಣ ಕೊಡಲು ಯಾವುದೇ ಮಾರ್ಗ ಇಲ್ಲ ಎಂದು ಚಿಂತೆಗೀಡಾಗಿದ್ದರು, ಅಂದಿನಿಂದ ಸರಿಯಾಗಿ ಆಹಾರ ಸೇವಿಸದೇ ಹಾಸಿಗೆ ಹಿಡಿದು ಹೃದಯಾಘಾತದಿಂದ ಪ್ರಾಣ ಬಿಟ್ಟಿರದ್ದಾರೆ‌. ಕೃಷಿಕರಾದ ಹಾಗೂ ಪರಿಶಿಷ್ಟ ವರ್ಗಕ್ಕೆ ಸೇರಿದ ನಮಗೆ‌ ಸ್ಕ್ವಾಡ್ ಅಧಿಕಾರಿ ಸಂಧ್ಯಾ ಅವರು ಬೆದರಿಕೆ ಒಡ್ಡಿದ್ದರಿಂದ ಕುಟುಂಬಕ್ಕೆ ಆಧಾರವಾಗಿದ್ದ ತಂದೆ ಅಸುನೀಗಿರುತ್ತಾರೆ. ಆದ್ದರಿಂದ ತನ್ನ ಕುಟುಂಬಕ್ಕೆ ಜಾತಿ ನಿಂದನೆ ಮಾಡಿದ ಸಂಧ್ಯಾ ಅವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಬೇಕಾಗಿ ಹಾಗೂ ತಂದೆಯ ಸಾವಿಗೆ ಕಾರಣರಾದ ಸಂಧ್ಯಾ ಅವರನ್ನು ಕೂಡಲೇ ಕೆಲಸದಿಂದ ವಜಾಗೊಳಿಸಿ, ಅವರಿಂದಲೇ ತಮ್ನ ಕುಟುಂಬಕ್ಕೆ ಜೀವನಾಂಶ ಒದಗಿಸುವ ವ್ಯವಸ್ಥೆ ಮಾಡಿಸುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಘಟನೆ ಕುರಿತು ರಾಮನಾಯ್ಕ ಅವರ ಪುತ್ರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಸಂಧ್ಯಾ ಅವರು ಮನೆಗೆ ಆಗಮಿಸಿ ಕಿರುಕುಳ ನೀಡಿದ ಬಳಿಕ ತಂದೆ ಆರೋಗ್ಯದಲ್ಲಿ ಏರು ಪೇರು ಉಂಟಾಯಿತು. ಬಳಿಕ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರು ತಮ್ಮ ತಂದೆ ಯಾವುದೋ ಕಾರಣದಿಂದ ಖಿನ್ನತೆಯಿಂದ ಬಳಲುತ್ತಿರುವ ಕುರಿತು ತಿಳಿಸಿದ್ದರು. ಕೃಷಿ ನಂಬಿ ಬದುಕುತ್ತಿದ್ದ ನಮ್ಮ ಕುಟುಂಬಕ್ಕೆ ಆಘಾತವಾಗಿದೆ. ಘಟನೆಗೆ ಕಾರಣರಾದ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ‌.

error: Content is protected !!