ಆಸ್ತಿ ವಿವಾದ ಸ್ವಂತ ಮಾವನನ್ನೆ ಕೊಲೆ ಮಾಡಿದ ಅಳಿಯ, ಆರೋಪಿಯನ್ನು ಬಂಧಿಸಿದ ಪೊಲೀಸರು

 

 

ಬೆಳ್ತಂಗಡಿ: ಜಾಗದ ತಕರಾರು ಹಿನ್ನೆಲೆಯಲ್ಲಿ ಅಳಿಯನೊಬ್ಬ ಸ್ವಂತ ಮಾವನನ್ನೆ ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ವೇಣೂರು ಸಮೀಪ ನಡೆದಿದೆ. ವೇಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಿಮಣೇಲು ಸಮೀಪದ ಗಾಂಧಿ ನಗರದ ನೂಯಿ ಎಂಬಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದ ಸಂಜೀವ ಶೆಟ್ಟಿ(65) ಎಂಬವರನ್ನು ಆಸ್ತಿಯ ವಿಚಾರಕ್ಕೆ ಸಂಬಂಧಿಸಿದಂತೆ ಸಮೀಪದಲ್ಲೇ ವಾಸವಿದ್ದ ತನ್ನ ಸಹೋದರಿಯ ಮಗ ಶ್ರೀಷಾ ಎಂಬಾತ ಇವರ ಮನೆಗೆ ಪ್ರವೇಶಿಸಿ ಗಲಾಟೆ ಮಾಡಿ ಕತ್ತಿಯಿಂದ ಕಡಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ .

 

 

 

ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಇದ್ದ ಜಗಳ ತಾರಕಕ್ಕೇರಿ ಈ ಕೊಲೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆರೋಪಿ ಶ್ರೀಷಾ ಎಂಬಾತ ಕತ್ತಿಯಿಂದ ಕುತ್ತಿಗೆಗೆ, ತಲೆಗೆ ಮತ್ತು ಹೊಟ್ಟೆಗೆ ಕಡಿದಿರುವ ಪರಿಣಾಮ ತೀವ್ರ ರಕ್ತಸ್ರಾವಕ್ಕೊಳಗಾದ ಸಂಜೀವ ಶೆಟ್ಟಿ ಅವರು ಕವುಚಿ ಬಿದ್ದ ಸ್ಥಿತಿಯಲ್ಲಿ ಮನೆಯಲ್ಲೇ ಸಾವನ್ನಪ್ಪಿದ್ದಾರೆ.
ಸಂಜೀವ ಶೆಟ್ಟಿಯವರು ನೂಯಿ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಪ್ರತಿದಿನ‌ ಕೃಷಿ ಕೂಲಿ ಕೆಲಸ ಮಾಡಿಕೊಂಡು ಅವರಷ್ಟಕ್ಕೇ ಅವರು ಒಬ್ಬಂಟಿಯಾಗಿ ನೆಲೆಸಿದ್ದರು. ಅವರ ಮನೆಯ ಪಕ್ಕದಲ್ಲೇ ನೆಲೆಸಿರುವ ಆರೋಪಿ ಶ್ರೀಷಾ ಅವರ ಮಧ್ಯೆ ಜಾಗದ ವಿಚಾರಕ್ಕೆ ಆಗಾಗ ಜಗಳ ನಡೆಯುತ್ತಿತ್ತು.  ಅಕ್ಟೋಬರ್ 7 ರಂದು ರಾತ್ರಿ ಇವರ ನಡುವೆ ಗಲಾಟೆ ನಡೆದು ಶ್ರೀಷಾ ತನ್ನ ಮಾವನನ್ನು ಕತ್ತಿಯಿಂದ ಕಡಿದು  ಕೊಲೆ ನಡೆಸಿದ್ದಾನೆ.
ಸಂಜೀವ ಶೆಟ್ಟಿ ಅವರು ಪ್ರತಿದಿನ ಕೃಷಿ ಕೂಲಿಗಾಗಿ ತೆರಳುತ್ತಿದ್ದರು. ಶುಕ್ರವಾರ ತಡವಾದರೂ ಸಂಜೀವ ಶೆಟ್ಟಿ ಅವರ ಮನೆ ಬಾಗಿಲು ತೆರೆದುಕೊಳ್ಳದ್ದರಿಂದ ಅವರ ಜೊತೆ ಕೆಲಸಕ್ಕೆ ಹೋಗುತ್ತಿದ್ದ ನೆರೆಮನೆಯ ಮಹಿಳೆಯೊಬ್ಬರು ಹುಡುಕಿಕೊಂಡು ಬಂದಿದ್ದ ವೇಳೆ ಘಟನೆ ಬೆಳಕಿಗೆ ಬಂದಿದೆ.

 

ಘಟನೆಯ ಬಗ್ಗೆ ಸಂಜೀವ ಶೆಟ್ಟಿ ಅವರ ಪುತ್ರ, ಬಂಟ್ವಾಳದಲ್ಲಿ ವಾಸವಿರುವ ಜಗನ್ನಾಥ ಅವರು ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತಿದ್ದಾರೆ.

error: Content is protected !!