ಕೊನೆಗೂ ಸನತ್ ಶೆಟ್ಟಿ ಮೃತದೇಹದ ಸುಳಿವು ಪತ್ತೆ: ಎಳನೀರು, ಬಂಗಾರಪಲ್ಕೆ ಜಲಪಾತ ಬಳಿ ಯುವಕ ನಾಪತ್ತೆ ಪ್ರಕರಣ: ಸತತ 22 ದಿನಗಳ ಕಾರ್ಯಾಚರಣೆ

ಬೆಳ್ತಂಗಡಿ: ಎಳನೀರು, ಬಂಗಾರಪಲ್ಕೆ ಜಲಪಾತ ಬಳಿ ನಾಪತ್ತೆಯಾಗಿದ್ದ ಯುವಕ ಸನತ್ ಶೆಟ್ಟಿ ಮೃತದೇಹ, ಸತತ 22 ದಿನಗಳ ಕಾರ್ಯಾಚರಣೆಯ ಬಳಿಕ ಮೃತ ದೇಹದ ಸುಳಿವು ಲಭ್ಯವಾಗಿದೆ.

ಜ.25ರಂದು ಮಧ್ಯಾಹ್ನ 1.30ರ ಸುಮಾರಿಗೆ ಮಲವಂತಿಗೆ ಗ್ರಾಮದ ಬಂಗಾರಪಲ್ಕೆ ಬಡಮನೆ ಅಬ್ಬಿ ಜಲಪಾತ ವೀಕ್ಷಣೆಗೆ ತೆರಳಿದ್ದ ಸಂದರ್ಭದಲ್ಲಿ ಗುಡ್ಡ ಕುಸಿದು, ಓರ್ವ ಯುವಕ ಮಣ್ಣಿನಡಿ ಸಿಲುಕಿದ್ದು, ಜತೆಗಿದ್ದವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. ಬಳಿಕ ಉಜಿರೆಯ ನಿವಾಸಿ ವಿದ್ಯಾರ್ಥಿ ಸನತ್ ಶೆಟ್ಟಿ ಮಣ್ಣಿನಡಿ ಸಿಲುಕಿ ನಾಪತ್ತೆಯಾಗಿದ್ದ ಕುರಿತ ವಿಚಾರ ಬೆಳಕಿಗೆ ಬಂದಿತ್ತು. ಸುಮಾರು 22 ದಿನಗಳ ಕಾಲ ಮಾನವೀಯ ನೆಲೆಯಲ್ಲಿ ಸತತ ಕಾರ್ಯಾಚರಣೆ ನಡೆಸಿದರೂ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ.ಇಂದು ಸನತ್ ಶೆಟ್ಟಿ ಮೃತದೇಹದ ಸುಳಿವು ಲಭ್ಯವಾಗಿದೆ.ಎಂದು ತಿಳಿದು ಬಂದಿದೆ.

ಫಲಿಸಿದ ಕಾರ್ಯಾಚರಣೆ:
ಜ.26ರಿಂದ ಘಟನಾ ಸ್ಥಳದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ತಂಡ, ಅಗ್ನಿಶಾಮಕದಳ, ಗೃಹರಕ್ಷಕ ದಳ, ಪೊಲೀಸ್ ಇಲಾಖೆ ಸಿಬ್ಬಂದಿ ಸತತ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಇವರ ಜೊತೆಗೆ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಸ್ಥಳೀಯರು, ಸಾರ್ವಜನಿಕರು ಸಹಕರಿಸುವ ಮೂಲಕ, ‘ಮಗನ ದೇಹ ಪತ್ತೆ ಮಾಡಿ ಕೊಡಿ’ ಎಂಬ ಪೋಷಕರ ಕರೆಗೆ ಓಗೊಟ್ಟು ಕಾರ್ಯಾಚರಣೆ ನಡೆಸಿ ಯಶಸ್ಸು ಸಾಧಿಸಿದ್ದಾರೆ‌. ಒಂದು ಹಂತದಲ್ಲಿ ಮೃತದೇಹ ಇದೆಯೇ ಎಂಬ ಅನುಮಾನ ದೃಷ್ಟಿಯಿಂದ ನೋಡಿದರೂ ಕಾರ್ಯಾಚರಣೆ ನಿಲ್ಲಿಸದೆ, ಮೃತದೇಹ ಪತ್ತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ವಿದ್ಯಾರ್ಥಿಯಾಗಿದ್ದ ಸನತ್:
ಮೃತ ಸನತ್ ಶೆಟ್ಟಿ ಅವರು ಲಾಯಿಲಾ ಗ್ರಾಮದ ಕಾಶಿಬೆಟ್ಟು ಕೃಷ್ಣ ವಾಸುದೇವ ಶೆಟ್ಟಿ ಅವರ ಪುತ್ರರಾಗಿದ್ದು, ಉಜಿರೆ ಎಸ್‌ಡಿಎಂ ಕಾಲೇಜಿನ ದ್ವಿತೀಯ ಪದವಿ ವಿದ್ಯಾರ್ಥಿಯಾಗಿದ್ದರು‌.

error: Content is protected !!