
ಚೆನ್ನೈ, : ಬಿಜೆಪಿ ತೊರೆದ ಬೆನ್ನಲ್ಲೇ ಅಣ್ಣಾಮಲೈ ಆರಂಭಿಸಿರುವ ಹೊಸ ಜನಾಂದೋಲನಕ್ಕೆ ಭಾರಿ ಜನ ಬೆಂಬಲ ವ್ಯಕ್ತವಾಗಿದೆ. ಹೊಸದಾಗಿ ಪ್ರಾರಂಭಿಸಿದ ‘ಇಧು ನಮ್ಮ ಲಯಕ್ಕಂ’ (ಇದು ನಮ್ಮ ಚಳವಳಿ) ಎಂಬ ರಾಜಕೀಯ ಆಂದೋಲನಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದೆ. ಈ ವೆಬ್ ಸೈಟ್ ಕೇವಲ 10 ಗಂಟೆಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಸದಸ್ಯರು ನೋಂದಣಿ ಮಾಡಿಕೊಂಡಿದ್ದಾರೆ.
ಈ ವಿಚಾರವಾಗಿ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅಣ್ಣಾಮಲೈ, ನಮ್ಮ ರಾಜಕೀಯ ಆಂದೋಲನವು ಒಂದು ಮೈಲಿಗಲ್ಲನ್ನು ಸಾಧಿಸಿದೆ. ಕೇವಲ 10 ಗಂಟೆಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರು ನೋಂದಾಯಿಸಿಕೊಂಡಿದ್ದಾರೆ. ಈ ಅಸಾಧಾರಣ ಪ್ರತಿಕ್ರಿಯೆಯು ನಮ್ಮ ದೃಷ್ಟಿಕೋನ ಮತ್ತು ಸಾಮೂಹಿಕ ಧ್ಯೇಯದಲ್ಲಿ ಇಟ್ಟಿರುವ ನಂಬಿಕೆಯ ಪ್ರಬಲ ಪ್ರತಿಬಿಂಬವಾಗಿದೆ. ಈ ಆಂದೋಲನದಲ್ಲಿ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ವ್ಯಕ್ತಿಗೂ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಕೆ. ಅಣ್ಣಾಮಲೈ ಅವರ ‘ಇಧು ನಮ್ಮ ಇಯಕ್ಕಂ’ ಆಂದೋಲನದ ಯಶಸ್ಸು ಮತ್ತು ಬಲವರ್ಧನೆಗಾಗಿ ಬಿಜೆಪಿ ಸದಸ್ಯರು ಮತ್ತು ಸ್ವಯಂಸೇವಕರು ಕಾಂಚೀಪುರಂನ ಕಾಮಾಕ್ಷಿ ಅಮ್ಮನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಶುಕ್ರವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಅಣ್ಣಾಮಲೈ ನೀಡಿದ್ದ ರಾಜೀನಾಮೆ ಪತ್ರವನ್ನು ಅಂಗೀಕರಿಸಿದ್ದರು.
ಅಣ್ಣಾಮಲೈ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಬಿಜೆಪಿ ನಾಯಕತ್ವಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಪಕ್ಷದಿಂದ ಹೊರನಡೆಯುವ ನಿರ್ಧಾರದ ಹಿಂದೆ ತಮಿಳುನಾಡಿನ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ ಎಂದು ಹೇಳಿಕೊಂಡಿದ್ದಾರೆ.
ಆದರ್ಶ, ಮೌಲ್ಯಗಳನ್ನು ಹೊಂದಿರುವ ಹೊಸ ಪಕ್ಷ ಕಟ್ಟುತ್ತೇವೆ: ರಾಜ್ಯದಲ್ಲಿ ಹೊಸ ರಾಜಕೀಯ ಪಕ್ಷಕ್ಕೆ ಖಂಡಿತವಾಗಿಯೂ ಅವಕಾಶವಿದೆ. ತಮಿಳುನಾಡಿನಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಖಂಡಿತವಾಗಿ ಸ್ಪರ್ಧಿಸುತ್ತೇವೆ ಎಂದ ಅವರು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳನ್ನು ಗುರುತಿಸಲು ಪ್ರಾಮಾಣಿಕ ಮತ್ತು ಕಠಿಣ ಪ್ರಯತ್ನಗಳು ಬೇಕಾಗುತ್ತದೆ ಎಂದ ಅವರು, ಸದಸ್ಯರ ನೋಂದಣಿಗಾಗಿ www.wetheleader.org ವೆಬ್ಸೈಟ್ ಅನ್ನು ಮರುಪ್ರಾರಂಭಿಸುವುದಾಗಿ ಘೋಷಿಸಿದ್ದರು.
ಕೊಯಮತ್ತೂರು ಜಿಲ್ಲೆಯಲ್ಲಿ ಎಪಿಜೆ ಅಬ್ದುಲ್ ಕಲಾಂ ಸೆಂಟರ್ ಫಾರ್ ಪೊಲಿಟಿಕಲ್ ಎಥಿಕ್ಸ್ ಸ್ಥಾಪಿಸಿ, ಅಲ್ಲಿ ನಮ್ಮ ಭವಿಷ್ಯದ ಪಕ್ಷದ ಪರವಾಗಿ ಚುನಾವಣಾ ಕಣಕ್ಕಿಳಿಸುವ ಅಭ್ಯರ್ಥಿಗಳಿಗೆ ಮೊದಲು ತರಬೇತಿ ನೀಡಲಾಗುತ್ತದೆ. ಈ ಮೂಲಕ ಅಭ್ಯರ್ಥಿಗಳನ್ನು ತಯಾರು ಮಾಡಲಾಗುತ್ತದೆ ಎಂದು ಅಣ್ಣಾಮಲೈ ಮಾಹಿತಿ ನೀಡಿದರು.