ಬೆಳ್ತಂಗಡಿ: ಸುಂದರ, ಪ್ರಶಾಂತ ಪ್ರಾಕೃತಿಕ ಪರಿಸರದಿಂದ ಸುಖ, ಶಾಂತಿ, ನೆಮ್ಮದಿಯ ಆರೋಗ್ಯಪೂರ್ಣ ಜೀವನ ಸಾಧ್ಯವಾಗುತ್ತದೆ. ಅರಣ್ಯನೀತಿ ಬದಲಾಗಬೇಕು. ಶಿಕ್ಷಣದಲ್ಲಿ ಸಸ್ಯವೈವಿಧ್ಯ ಹಾಗೂ ಪಾರಂಪರಿಕ ಸಸ್ಯಗಳ ಬಗ್ಗೆ ಅರಿವು, ಜಾಗೃತಿ ಮೂಡಿಸಿ ಎಲ್ಲರೂ ದೃಢಸಂಕಲ್ಪದೊಂದಿಗೆ ಪರಿಶುದ್ಧ ಪರಿಸರ ಸಂರಕ್ಷಣೆಯ ರಾಯಬಾರಿಗಳಾಗಬೇಕು ಎಂದು ಖ್ಯಾತ ಪರಿಸರತಜ್ಞ ಶಿರಸಿಯ ಶಿವಾನಂದ ಕಳವೆ ಹೇಳಿದರು.
ಅವರು ಶನಿವಾರ ಉಜಿರೆಯಲ್ಲಿ ಕರ್ನಾಟಕರಾಜ್ಯ ಮಾಲಿನ್ಯನಿಯಂತ್ರಣ ಮಂಡಳಿ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಬೆಳ್ತಂಗಡಿ ತಾಲ್ಲೂಕು ಕಾನೂನು ಸೇವಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಎಸ್.ಡಿ.ಎಂ. ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿಸಿದ ವಿಶ್ವಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ನದಿಗಳು, ತೊರೆಗಳು ಸ್ವಚ್ಛತಾ ಕಾರ್ಯ ಮಾಡಿದರೆ, ಮನುಷ್ಯರು ಬಳಸಿ, ಬಿಸಾಡಿದ ತ್ಯಾಜ್ಯಗಳ ಮೂಲಕ ಪರಿಸರ ಮಾಲಿನ್ಯ ಮಾಡುತ್ತಾರೆ. ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆಯೊಂದಿಗೆ, ಪಾರಂಪರಿಕ ಕೃಷಿ ಪದ್ಧತಿ ಮರೆತಿದ್ದೇವೆ.
ಸರಳ ತಂತ್ರಜ್ಞಾನ: ಹಿಂದೆ ಗದ್ದೆಗಳಲ್ಲಿ ಹಾಗೂ ತೋಟಗಳಲ್ಲಿ ಮಣ್ಣಿನ ಗೋಡೆ ಕಟ್ಟಿ, ಹಸಿ ಸೆಗಣಿ ಮೆತ್ತಿ ಬಿಡುತ್ತಿದ್ದರು. ಬಳಿಕ ಮಳೆಗಾಲದಲ್ಲಿ ಅದರ ಮೇಲೆ ಹಾವಸೆ ಬೆಳೆದು ಆವರಿಸಿ ಅದು ಕಾಂಕ್ರೀಟ್ ಗೋಡೆಯಂತೆ ನೂರಾರು ವರ್ಷ ಬಳಕೆಯಾಗುತ್ತಿತ್ತು. ಇದು ರೈತರ ಸರಳ ತಂತ್ರಜ್ಞಾನ.
ಜನಸಂಖ್ಯೆ ಹೆಚ್ಚಳ, ಪ್ರಕೃತಿ-ಪರಿಸರ ಮಾಲಿನ್ಯ, ವಸತಿಸಮುಚ್ಚಯಗಳು, ರಸ್ತೆಗಳ ವಿಸ್ತರಣೆ, ವಾಣಿಜ್ಯ ಸಂರ್ಕಿರ್ಣಗಳಿಗಾಗಿ ಕೆರೆಗಳನ್ನು ಮುಚ್ಚುವುದು, ಅರಣ್ಯನಾಶ, ಗುಡ್ಡ-ಬೆಟ್ಟಗಳು ಮಾಯವಾಗಿ ಇತ್ಯಾದಿ ಹತ್ತು ಹಲವು ಕಾರಣಗಳಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ.
ಅತಿವೃಷ್ಟಿ-ಅನಾವೃಷ್ಟಿ, ಕೀಟನಾಶಕ ಬಳಕೆ ಇತ್ಯಾದಿ ಕಾರಣಗಳಿಂದ ಇಂದು ಶುದ್ಧ ನೀರು, ಗಾಳಿ ಮತ್ತು ಪರಿಶುದ್ಧ ಆಹಾರ ಸಿಗುತ್ತಿಲ್ಲ.
ಮುಂದಿನ ಜನಾಂಗಕ್ಕೆ ಪರಿಶುದ್ಧ ಪರಿಸರ ರೂಪಿಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದು ಶಿವಾನಂದ ಕಳವೆ ಅಭಿಪ್ರಾಯ ಪಟ್ಟರು.
ಕರ್ನಾಟಕ ರಾಜ್ಯ ಮಾಲಿನ್ಯನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಡಾ. ಎಚ್. ಲಕ್ಷ್ಮಿಕಾಂತ್ ಮಾತನಾಡಿ, ಮಣ್ಣು, ನೀರು ಮತ್ತು ಮರಗಳು ಸಕಲ ಜೀವಿಗಳ ಆರೋಗ್ಯಪೂರ್ಣ ಜೀವನಕ್ಕೂ ಅನಿವಾರ್ಯವಾಗಿದೆ. ಅನಿಯಮಿತ ಬೋರ್ವೆಲ್ಗಳ ಅಪಾಯಕಾರಿ ದುರಂತದಿಂದಾಗಿ ಕರಾವಳಿ ಕರಗುತ್ತಿದೆ ಎಂದು ಅವರು ಎಚ್ಚರಿಕೆ ನೀಡಿದರು. ಪರಿಸರ ಮಾಲಿನ್ಯ ಹಾಗೂ ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದಾಗಿ ನದಿದಂಡೆಗಳು ಮತ್ತು ನದಿಪಾತ್ರಗಳು ಹಾಳಾಗುತ್ತಿವೆ. ಇವುಗಳನ್ನು ಸರ್ಕಾರವೆ ವಶಪಡಿಸಿ ಸಂರಕ್ಷಣೆ ಮಾಡಬೇಕು ಎಂದು ಅವರು ಹೇಳಿದರು.
ಆರೋಗ್ಯ ವರ್ಧನೆ, ದೀರ್ಘಾಯುಷ್ಯ ಮತ್ತು ಸುಂದರ ರೂಪ ಹೊಂದಲು ಕಡಿಮೆ ಊಟ ಮಾಡಿ, ಹೆಚ್ಚು ನೀರು ಕುಡಿಯಿರಿ ಎಂದು ಅವರು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಟಿ. ಅಶೋಕಕುಮಾರ್ ಮಾತನಾಡಿ, ಪರಿಸರ ಸಂರಕ್ಷಣೆ ಎಲ್ಲರ ಹೊಣೆಗಾರಿಕೆಯಾಗಿದ್ದು, ಶಾಲಾ-ಕಾಲೇಜುಗಳಲ್ಲಿ ವಿಚಾರಸಂಕಿರಣ, ಸ್ಪರ್ಧೆಗಳು ಹಾಗೂ ಗಿಡಗಳ ನಾಟಿ ಮೂಲಕ ಪರಿಸರ ಸಂರಕ್ಷಣೆ ಬಗ್ಯೆ ಅರಿವು, ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಕಾಲೇಜು ವಠಾರದಲ್ಲಿ ಗಿಡಗಳನ್ನು ನೆಡಲಾಯಿತು.
ವಿದ್ಯಾರ್ಥಿಗಳಿಗೆ 250 ಹಣ್ಣಿನ ಗಿಡಗಳನ್ನು ವಿತರಿಸಲಾಯಿತು.
ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ ಪರಿಸರ ಜಾಥಾಕ್ಕೆ ಚಾಲನೆ ನೀಡಿದರು.
ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ತುಳುಪುಳೆ ಉಪಸ್ಥಿತರಿದ್ದರು.
ಎಸ್.ಡಿ.ಎಂ. ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಪ್ರಮೋದ್ ಕುಮಾರ್ ಧನ್ಯವಾದವಿತ್ತರು. ಡಾ. ಶ್ರೀಧರ ಭಟ್ ಕಾರ್ಯಕ್ರಮ ನಿರ್ವಹಿಸಿದರು.