ಪರಂಗಿಪೇಟೆ, ದಿಗಂತ್ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪರೀಕ್ಷೆ ಭೀತಿಯಿಂದ ಮನೆ ಬಿಟ್ಟಿದ್ದ ಪಿಯುಸಿ ವಿದ್ಯಾರ್ಥಿ: ಪ್ರಕರಣದ ಬಗ್ಗೆ ಮಾಹಿತಿ ನೀಡಿದ ದ.ಕ.ಜಿಲ್ಲಾ ಎಸ್ಪಿ ಯತೀಶ್ ಎನ್.:

 

 

ಮಂಗಳೂರು: ನಿಗೂಢ ರೀತಿಯಲ್ಲಿ ಕಾಣೆಯಾಗಿ ಆತಂಕಕ್ಕೆ ಕಾರಣವಾಗಿದ್ದ ಪರಂಗಿಪೇಟೆ ಕಿದೆಬೆಟ್ಟಿನ ಪಿಯುಸಿ ವಿದ್ಯಾರ್ಥಿ ದಿಗಂತ್ , ಪರೀಕ್ಷಾ ಭಯದಿಂದ ಮನೆ ತೊರೆದ ಬಗ್ಗೆ ತನಿಖೆಯಲ್ಲಿ ಆತ ಬಾಯಿಬಿಟ್ಟಿರುವುದಾಗಿ ದ.ಕ.ಜಿಲ್ಲಾ ಎಸ್ಪಿ ಯತೀಶ್ ಎನ್ ಹೇಳಿದ್ದಾರೆ.

ಈ ಬಗ್ಗೆ ಕಛೇರಿಯಲ್ಲಿ ಮಾಹಿತಿ ನೀಡಿದ ಅವರು, “ಆತ ತನ್ನನ್ನು ಯಾರೋ ಕರೆದೊಯ್ದಿದ್ದಾಗಿ ಮೊದಲು ಹೇಳಿದ್ದ. ಆದರೆ ಸಮಾಧಾನಿಸಿ ನಿಧಾನವಾಗಿ ಬಾಯಿ ಬಿಡಿಸಿದಾಗ ಪರೀಕ್ಷೆಗೆ ಸರಿಯಾಗಿ ತಯಾರಾಗದಿದ್ದ ಕಾರಣಕ್ಕೆ ಭಯದಿಂದ ಮನೆ ತೊರೆದೆ ಎಂದು ಹೇಳಿದ್ದಾನೆ” ಎಂದರು.

 

                       ಜಾಹೀರಾತು

 

“ಫೆ.25ರಂದು ಸಂಜೆ ವೇಳೆ 500 ರೂ. ಹಣದೊಂದಿಗೆ ಮನೆ ಬಿಟ್ಟವನು, ರೈಲ್ವೆ ಹಳಿಯಲ್ಲಿ ನಡೆದುಕೊಂಡು ಬಂದು ಅರ್ಕುಳ ತಲುಪಿದ್ದಾನೆ. ಅಲ್ಲಿ ಮುಖ್ಯರಸ್ತೆಗೆ ಬಂದು ಬೈಕೊಂದರಲ್ಲಿ ಲಿಫ್ಟ್ ಪಡೆದು ಮಂಗಳೂರು ನಗರಕ್ಕೆ ಬಂದು,ಅಲ್ಲಿಂದ ಬಸ್‌ನಲ್ಲಿ ಶಿವಮೊಗ್ಗಕ್ಕೆ ಹೋಗಿದ್ದಾನೆ. ಅಲ್ಲಿ ರೈಲು ಹತ್ತಿ ಮೈಸೂರಿಗೆ ತೆರಳಿದ್ದಾನೆ. ಅಲ್ಲಿಂದ ಕೆಂಗೇರಿಗೆ ಹೋಗಿದ್ದಾನೆ. ಬಳಿಕ ನಂದಿಹಿಲ್ಸ್ ಬೆಟ್ಟಕ್ಕೆ ಹೋಗಿ ಖಾಸಗಿ ರೆಸಾರ್ಟ್ ಒಂದರಲ್ಲಿ ‌2 ದಿನ ಕೆಲಸ ಮಾಡಿ, ಹಣ ಪಡೆದುಕೊಂಡಿದ್ದಾನೆ. ಬಳಿಕ ವಾಪಸ್ ನಂದಿಹಿಲ್ಸ್‌ನಿಂದ ಕೆಂಗೇರಿ, ಅಲ್ಲಿಂದ ಮೈಸೂರಿಗೆ ಬಂದಿದ್ದಾನೆ. ಅಲ್ಲಿ ಶುಕ್ರವಾರ ರಾತ್ರಿ ರೈಲಿನಲ್ಲಿ ಉಡುಪಿಗೆ ಬಂದಿದ್ದಾನೆ” ಎಂದು ಅವರು ವಿವರಿಸಿದರು.

“ಉಡುಪಿಯಲ್ಲಿ ತಿನ್ನಲು ಹಾಗೂ ಬಟ್ಟೆ ಖರೀದಿಸಲು ಸ್ಥಳೀಯ ಅಂಗಡಿಗೆ ಹೋಗಿದ್ದಾನೆ. ಅಲ್ಲಿ ಹಣ ಕಡಿಮೆಯಾಗಿ ಓಡಲು ಅನುವಾದಾಗ ಸಿಬ್ಬಂದಿ ತಡೆದು ವಿಚಾರಿಸಿ ಉಡುಪಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಉಡುಪಿ ಪೊಲೀಸರು ಆತನನ್ನು ರಕ್ಷಿಸಿದರು. ದ.ಕ. ಜಿಲ್ಲಾ ಪೊಲೀಸರು ಆತನನ್ನು ಕರೆತಂದು ಸಿಡಬ್ಲ್ಯುಸಿ ಮುಂದೆ ಹಾಜರುಪಡಿಸಲಾಗಿದೆ. ಇದೀಗ ಬೋಂದೆಲ್‌ ಬಾಲಗೃಹದಲ್ಲಿ ಇರಿಸಲಾಗಿದೆ. ಹೆತ್ತವರು ಆತನ ಪತ್ತೆಗೆ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಆದ್ದರಿಂದ ನಾವು ಹೈಕೋರ್ಟ್ ಮುಂದೆ ಹಾಜರುಪಡಿಸಿ ನ್ಯಾಯಾಲಯ ಏನೂ ಸೂಚಿಸುತ್ತೋ ಅದರಂತೆ ಮುಂದುವರಿಯಲಿದ್ದೇವೆ‌” ಎಂದು ಎಸ್ಪಿ ಯತೀಶ್ ಹೇಳಿದರು.

ನಾಪತ್ತೆಯಾದ ಸಂದರ್ಭ ದೊರಕಿದ ಆತನ ಚಪ್ಪಲಿಯಲ್ಲಿನ ರಕ್ತದ ಕಲೆಯ ಬಗ್ಗೆ ಮಾಹಿತಿ ನೀಡಿದ ಎಸ್ಪಿ, ಈ ಬಗ್ಗೆ ನಾವು ಆತನನ್ನು ವಿಚಾರಿಸಿದ್ದೇವೆ. ಹಿಮ್ಮಡಿಯಲ್ಲಾದ ಗಾಯದಿಂದ ರಕ್ತ ಒಸರಿ ಅಂಟಿಕೊಂಡ ರಕ್ತ ಎಂದು ಆತ ಹೇಳಿದ್ದಾಗಿ ತಿಳಿಸಿದರು.

error: Content is protected !!