ಬಂಟ್ವಾಳ: ಇ.ಡಿ ಸೋಗಿನಲ್ಲಿ ಉದ್ಯಮಿಯ ಮನೆಗೆ ಬಂದು ದರೋಡೆ ಮಾಡಿದ್ದ ಪ್ರಕರಣ ಸಂಬಂಧ ವಿಟ್ಲ ಪೊಲೀಸ್ ಠಾಣಾ ವಿಶೇಷ ತನಿಖಾ ತಂಡ ಏಳು ಮಂದಿ ಆರೋಪಿಗಳನ್ನು ಬಂಧಿಸಿದೆ.
ಜನವರಿ 3ರಂದು ರಾತ್ರಿ ಬಂಟ್ವಾಳ ತಾಲೂಕಿನ ಕೊಳ್ನಾಡು ಸಮೀಪದ ಬೋಳಂತೂರು ನಾರ್ಶ ಎಂಬಲ್ಲಿ, ಸಿಂಗಾರಿ ಬೀಡಿ ಕಂಪೆನಿಯ ಮಾಲೀಕ ಎಂ.ಸುಲೈಮಾನ್ ಅವರ ಮನೆಗೆ ತಮಿಳುನಾಡು ರಿಜಿಸ್ಟ್ರೇಶನ್ ಹೊಂದಿರುವ ಕಾರಿನಲ್ಲಿ ಆಗಮಿಸಿದ 6 ಮಂದಿಯ ತಂಡವೊAದು ಇ.ಡಿ ದಾಳಿ ನಡೆಸಿದಂತೆ ನಟಿಸಿತ್ತು. ತಾವು ಇ.ಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಎಂದು ನಂಬಿಸಿ, ಸುಮಾರು ಎರಡೂವರೆ ಗಂಟೆವರೆಗೆ ತನಿಖೆ ನಡೆಸಿದ ನಾಟಕ ಮಾಡಿ, ಮನೆಯಲ್ಲಿದ್ದ ಸುಮಾರು 30 ಲಕ್ಷ ರೂ.ಗಳಷ್ಟು ಹಣವನ್ನು ದೋಚಿಕೊಂಡು ಪರಾರಿಯಾಗಿತ್ತು.
ದರೋಡೆಕೋರರು ಕಿತ್ತುಕೊಂಡು ಹೋಗಿದ್ದ ಮನೆಯವರ ಮೊಬೈಲ್ ಫೋನ್ಗಳು ಮನೆಯ ತಳ ಅಂತಸ್ತಿನ ರ್ಯಾಕ್ನಲ್ಲಿ ಪತ್ತೆಯಾಗಿತ್ತು. ಈ ಸಂಬAಧ ಉದ್ಯಮಿ ಸುಲೈಮಾನ್ ಅವರ ಪುತ್ರ ಇಕ್ಬಾಲ್ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ಜಾಡು ಹಿಡಿದ ಪೊಲೀಸರು, ದರೋಡೆ ಕೃತ್ಯದ ಸೂತ್ರದಾರ ಕೇರಳದ ಎಎಸ್ಐ ಬಾಬು (48), ಎಂಬಾತನನ್ನು ತ್ರಿಶೂರ್ ಜಿಲ್ಲಾ ಎಸ್ಪಿಯ ಅನುಮತಿಯೊಂದಿಗೆ ಶನಿವಾರ ಮಧ್ಯಾಹ್ನ ಪೊಲೀಸ್ ಕ್ವಾರ್ಟರ್ಸ್ನಿಂದ ಬಂಧಿಸಿ ವಿಟ್ಲ ಪೊಲೀಸ್ ಠಾಣೆಗೆ ಕರೆದು ತರಲಾಗಿದೆ.
ಮನೆಯ ಮಾಹಿತಿ ನೀಡಿದ್ದ ಸ್ಥಳೀಯ ಆರೋಪಿ ಕೊಳ್ನಾಡು ನಿವಾಸಿ ಸಿರಾಜಿದ್ದೀನ್ (37), ಬಂಟ್ವಾಳ ನಿವಾಸಿ ಮೊಹಮ್ಮದ್ ಇಕ್ಬಾಲ್ (38) ಹಾಗೂ ಮಂಗಳೂರು ಪಡೀಲ್ ನಿವಾಸಿ ಮೊಹಮ್ಮದ್ ಅನ್ಸಾರ್ (27) ಎಂಬವರು ಇದೀಗ ಬಂಧಿತ ನಾಲ್ವರು ಆರೋಪಿಗಳಾಗಿದ್ದಾರೆ.
ತನಿಖಾ ತಂಡವು ಈಗಾಗಲೇ ಕೇರಳ ಕೊಲ್ಲಂ ನಿವಾಸಿಗಳಾದ ಅನಿಲ್ ಫರ್ನಾಂಡೀಸ್ (49), ಸಚ್ಚಿನ್ ಟಿ.ಎಸ್. (29), ಹಾಗೂ ಶಬಿನ್ ಎಸ್. (27) ಎಂಬವರನ್ನು ಬಂಧಿಸಿ, ನ್ಯಾಯಾಂಗ ಬಂಧನದಲ್ಲಿರಿಸಿದೆ.
ಪ್ರಕರಣದ ತನಿಖೆಯ ಭಾಗವಾಗಿ ಶನಿವಾರ ಕೃತ್ಯಕ್ಕೆ ಮನೆಯ ಮಾಹಿತಿ ನೀಡಿದ್ದ ಸ್ಥಳೀಯ ಆರೋಪಿ ಕೊಳ್ನಾಡು ನಿವಾಸಿ ಸಿರಾಜುದ್ದೀನ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಲಾಯಿತು. ಆತ ನೀಡಿದ ಮಾಹಿತಿಯ ಆಧಾರದಲ್ಲಿ ಮೊಹಮ್ಮದ್ ಇಕ್ಬಾಲ್ ಹಾಗೂ ಮೊಹಮ್ಮದ್ ಅನ್ಸಾರ್ ಎಂಬವರನ್ನು ಬಂಧಿಸಲಾಯಿತು. ಆ ಬಳಿಕ ಕೇರಳದ ಎಎಸ್ಐ ಶಫೀರ್ ಬಾಬುನನ್ನು ಬಂಧಿಸಲಾಗಿದೆ ಎಂದು ಎಸ್ಪಿ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ಪ್ರಕರಣ ಸಂಬAಧ ಈವರೆಗೆ ಎಲ್ಲಾ 7 ಮಂದಿ ಆರೋಪಿಗಳನ್ನು ಬಂಧಿಸಿದಂತಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಎಸ್ಪಿ ಯತೀಶ್ ಎನ್. ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ವ್ಯಾಪ್ತಿಯು ಅಪರಾಧ ಕೃತ್ಯಗಳ ತನಿಖೆಯಲ್ಲಿ ಪರಿಣಿತರಾದ ಅಧಿಕಾರಿ ಹಾಗೂ ಸಿಬ್ಬಂದಿಯ ನಾಲ್ಕು ತಂಡಗಳು ತನಿಖೆಯಲ್ಲಿ ಕಾರ್ಯಾಚರಣೆ ನಡೆಸಿವೆ.