ನಟ ಚೇತನ್ ಅಹಿಂಸಾರಿಂದ ಬ್ರಾಹ್ಮಣರನ್ನು ಭಯೋತ್ಪಾದಕರಂತೆ ಬಿಂಬಿಸುವ ಕಾರ್ಯ: ಸ್ವಾರ್ಥ ಸಾಧನೆಗಾಗಿ ಹಿಂದೂ ಸಮಾಜ, ಬ್ರಾಹ್ಮಣ ಸಮುದಾಯದ ಅವಹೇಳನ ಖಂಡನೀಯ: ಸುದ್ದಿಗೋಷ್ಠಿಯಲ್ಲಿ ವಿಶ್ವಹಿಂದೂ ಪರಿಷತ್, ಭಜರಂಗದಳ ಹೇಳಿಕೆ

ಬೆಳ್ತಂಗಡಿ: ಇತ್ತೀಚೆಗೆ ಕನ್ನಡ ಸಿನಿಮಾ ನಟ ಚೇತನ್ ಅವರು ‘ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಲಿಂಗದ ಅಸಮಾನತೆಯ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ’ ಎಂಬ ಪ್ರಾರಂಭದ ನುಡಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ವೀಡಿಯೋ ಕ್ಲಿಪ್‌ ಹರಿಯಬಿಟ್ಟಿದ್ದರು. ಈ ವೀಡಿಯೋ ಕ್ಲಿಪ್ ಯೂಟ್ಯೂಬ್‌ನಲ್ಲೂ ಲಭ್ಯವಿದೆ. ಸದ್ರಿ ವಿಡಿಯೋದಲ್ಲಿ ಚೇತನ್ ಅವರು, ಹಿಂದೂ ಸಮಾಜದ ಒಂದು ಅವಿಭಾಜ್ಯ ಅಂಗವಾದ ಬ್ರಾಹ್ಮಣ ಸಮುದಾಯದ ವಿರುದ್ಧ ಅತ್ಯಂತ ಅವಹೇಳನಕಾರಿ ಮತ್ತು ದ್ವೇಷಭರಿತ ಕಾಲ್ಪನಿಕ ಮಾತುಗಳನ್ನು ಆಡಿದ್ದು ಇದನ್ನು ‌ವಿಶ್ವಹಿಂದೂ ಪರಿಷತ್ ಭಜರಂಗದಳ ಖಂಡಿಸುತ್ತದೆ ಎಂದು ವಿಶ್ವ ಹಿಂದು ಪರಿಷತ್ ತಾಲೂಕು ಅಧ್ಯಕ್ಷ ಸುಬ್ರಹ್ಮಣ್ಯ ಅಗರ್ತ ಹೇಳಿದರು.

ಅವರು ಬೆಳ್ತಂಗಡಿಯಲ್ಲಿ ವಿಶ್ವಹಿಂದೂ ಪರಿಷತ್, ಭಜರಂಗದಳದಿಂದ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ನಟ ಚೇತನ್ ಅವರು ಸ್ವಾರ್ಥ ಸಾಧನೆಗಾಗಿ ಹಿಂದೂ ಸಮಾಜ ಹಾಗೂ ಬ್ರಾಹ್ಮಣ ಸಮುದಾಯದ ಆವಹೇಳನ ನಡೆಸಿದ್ದಾರೆ. ಇದರ ಹಿಂದೆ ಹಿಂದೂ ಸಮಾಜವನ್ನು ಒಡೆಯುವ ಸ್ಪಷ್ಟ ಪ್ರಯತ್ನ ಕಂಡುಬರುತ್ತಿದೆ. ಹಿಂದೂ ಸಮಾಜದ ಭಾಗವಾದ ಬ್ರಾಹ್ಮಣರ ಚಟುವಟಿಕೆಗಳಿಗೆ ‘ಆಧ್ಯಾತ್ಮಿಕ ಭಯೋತ್ಪಾದನೆ’ ಎಂಬ ಹೊಸ ನಾಮಕರಣವನ್ನೂ ಅವರು ಮಾಡಿದ್ದಾರೆ. ಈ ಮೂಲಕ ಬ್ರಾಹ್ಮಣರನ್ನು ಭಯೋತ್ಪಾದಕರು ಎಂಬಂತೆ ಬಿಂಬಿಸುವ ಮೂಲಕ ಹಿಂದೂ ಸಮಾಜದ ಇತರರು ಬ್ರಾಹ್ಮಣರನ್ನು ದ್ವೇಷಿಸುವಂತೆ ಮಾಡುವ ಉದ್ದೇಶ ಇದರ ಹಿಂದೆ ಅಡಗಿರುವುದು ಸ್ಪಷ್ಟ. ಪ್ರಸ್ತುತ ಬ್ರಾಹ್ಮಣ ಸಮಾಜವನ್ನು ಗುರಿಯಾಗಿಟ್ಟು ಮಾಡುತ್ತಿರುವ ಇಂತಹ ಪ್ರಯತ್ನಗಳು ಮುಂದೆ ಹಿಂದೂ ಸಮಾಜದ ಇತರ ವಿಭಾಗಗಳನ್ನು ಗುರಿಯಾಗಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳೂ ಇರುತ್ತವೆ. ಹಿಂದೂ ಸಮಾಜದ ಯಾವುದೇ ವಿಭಾಗಗಳನ್ನು ಅವಹೇಳನ ಮಾಡುವ ಅಥವಾ ಪ್ರತ್ಯೇಕಿಸುವ ಯಾವುದೇ ಪ್ರಯತ್ನಗಳನ್ನೂ ವಿಶ್ವಹಿಂದೂ ಪರಿಷತ್ ಖಂಡಿಸುತ್ತದೆ ಎಂದರು.

ಪುತ್ತೂರು ಜಿಲ್ಲಾ ಕಾರ್ಯಾಧ್ಯಕ್ಷ ಭಾಸ್ಕರ್ ಧರ್ಮಸ್ಥಳ ಮಾತನಾಡಿ, ಜಗತ್ತಿನ ಎಲ್ಲಾ ಧರ್ಮಗಳಲ್ಲಿಯೂ ಧರ್ಮದೊಳಗಿನ ಉಪ ವಿಭಾಗಗಳನ್ನು ನಾವು ಕಾಣುತ್ತೇವೆ. ಇದು ಎಲ್ಲಾ ಧರ್ಮಗಳೂ ರೂಪಿಸಿಕೊಂಡ ತಮ್ಮೊಳಗಿನ ಒಂದು ವ್ಯವಸ್ಥೆ. ಹಿಂದೂ ಧರ್ಮದಲ್ಲಿ ಮಾತ್ರ ಕಂಡುಬರುವ ವಿಶೇಷತೆ ಅಲ್ಲ. ಆದರೆ ಹಿಂದೂ ಧರ್ಮವನ್ನು ಒಡೆಯುವ ದುರುದ್ದೇಶವನ್ನು ಹೊಂದಿರುವ ಕೆಲವು ಅನಿಷ್ಟ ಶಕ್ತಿಗಳು ಅದಕ್ಕಾಗಿ ಬೇರೆ ಬೇರೆ ವ್ಯಕ್ತಿಗಳನ್ನು ಬೇರೆ ಬೇರೆ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಿರುವುದು ಖಂಡನೀಯ. ಬಹುಷಃ ಚೇತನ್‌ರವರು ಯಾವುದೋ ಲಾಭಕ್ಕಾಗಿ ತನ್ನ ನಟನೆಯನ್ನು ಇಲ್ಲಿಯೂ ಮಾಡಿದ್ದಾರೆ ಎಂಬುದು ನಮ್ಮ ಭಾವನೆ. ಆದರೆ ತಮ್ಮ ಸ್ವಾರ್ಥ ಸಾಧನೆಗಾಗಿ ಹಿಂದೂ ಸಮಾಜದ ಯಾವುದೇ ವಿಭಾಗಗಳನ್ನು ಮತ್ತು ಅವುಗಳ ಆಚರಣೆಗಳು, ನಂಬಿಕೆಗಳು , ಜೀವನ ಪದ್ಧತಿಗಳು ಮುಂತಾದವುಗಳನ್ನು ಕೆಟ್ಟದಾಗಿ ಬಿಂಬಿಸುವ ಇಂತಹ ಪ್ರಯತ್ನಗಳನ್ನು ವಿಶ್ವಹಿಂದೂ ಪರಿಷತ್ ತೀವ್ರವಾಗಿ ವಿರೋಧಿಸುತ್ತದೆ. ಯಾವುದೋ ದುರ್ಲಾಭಕ್ಕಾಗಿ ಚೇತನ್ ಮತ್ತು ಅವರಂತವರು ಮಾಡುತ್ತಿರುವ ಇಂತಹ ಹಿಂದೂ ಸಮಾಜ ಒಡೆಯುವ ಇಂತಹ ಪ್ರಯತ್ನಗಳನ್ನು ವಿಶ್ವಹಿಂದೂ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದರು.

ವಿ.ಎಚ್.ಪಿ ತಾಲೂಕು ಗೌರವಾಧ್ಯಕ್ಷ ಡಾ.ದಯಾಕರ್ ಎಂ.ಎಂ., ವಿ.ಎಚ್ .ಪಿ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ವಿಎಚ್ ಪಿ ತಾಲೂಕು ಕಾರ್ಯದರ್ಶಿ ಮೋಹನ್ ಬೆಳ್ತಂಗಡಿ, ಬ್ರಾಹ್ಮಣ ಸಮುದಾಯದ ಪ್ರಮುಖರಾದ ವಕೀಲ ಬಿ.ಕೆ.‌ಧನಂಜಯ ರಾವ್ ಚೇತನ್ ನಡೆಯನ್ನು ‌ಖಂಡಿಸಿದರು. ರಾಘವೇಂದ್ರ ಬೈಪಾಡಿತ್ತಾಯ, ಕೇಶವ ಭಟ್ ಅತ್ತಾಜೆ, ಗಿರೀಶ್ ಡೋಂಗ್ರೆ, ಗಣಪತಿ ಭಟ್, ವಿಶ್ವನಾಥ ಹೊಳ್ಳ ಇದ್ದರು.

error: Content is protected !!